ನರೀಂದರ್ ಸಿಂಗ್ ಕೊಡಾನ್ ಒಬ್ಬ ಭಾರತೀಯ ಜೂಡೋ ಪಟುವಾಗಿದ್ದರು. ಇವರು ಭಾರತದ ಪರ ಎರಡು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಸಿಂಗ್‍ರವರು ೧೯೬೯ರ ಮೇ ೨೮ರಂದು ದೆಹಲಿಯಲ್ಲಿ ಜನಿಸಿದರು. == ಕ್ರೀಡಾ ಸಾಧನೆ == ೧೯೮೫ರಲ್ಲಿ ಮೊದಲ ಬಾರಿ ರಾ‌‍‍ಷ್ಟ್ರೀಯ ಚಾಂಪಿಯನ್‍ಶಿಪ್‍ನ ವಿಜೇತರಾದರು. ೧೯೮೯ರಲ್ಲಿ ನಡೆದ ಸೌತ್ ಏಷಿಯನ್ ಗೇಮ್ಸ್‌ನಲ್ಲಿ ಮೊದಲ ಬಾರಿ ಭಾರತವನ್ನು ಪ್ರತಿನಿಧಿಸಿದರು ಹಾಗೂ ಇದೇ ಕ್ರೀಡಾಕೂಟದಲ್ಲಿ ಬಂಗಾರದ ಪದಕವನ್ನು ಗೆಲ್ಲುವ ಮೂಲಕ ಭಾರತದ ಪರವಾಗಿ ಜೂಡೋದಲ್ಲಿ ತಮ್ಮ ಮೊದಲ ಪದಕವನ್ನು ಪಡೆದರು. ಅನಂತರ ೧೯೯೦ರಲ್ಲಿ ನ್ಯೂಜಿಲ್ಯಾಂಡ್‍ನ ಆಕ್ಲೆಂಡ್‍ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಎ‍ಕ್ಸ್ಟ್ರಾ ಲೈಟ್ ವೇಟ್ ವಿಭಾಗದಲ್ಲಿ ಕಂಚಿನ ಪದಕವನ್ನು ಹಂಚಿಕೊಂಡರು. ಇವರು ಭಾರತದ ಪರವಾಗಿ ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಏಕೈಕ ಜುಡೋಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿ ಜುಡೋಕ ಎಂದರೆ ಜೂಡೋ ಪಟು ಅಥವಾ ಜೂಡೋ ಆಟಗಾರ ಎಂದರ್ಥ. === ಒಲಿಂಪಿಕ್ಸ್ === ಇವರ ಮೊದಲ ಒಲಿಂಪಿಕ್ ಕ್ರೀಡಾಕೂಟ ೧೯೯೨ರಲ್ಲಿ ಸ್ಪೇನ್‍ನ ಬಾರ್ಸಿಲೋನಾದಲ್ಲಿ ಈಜಿಪ್ಟ್‌ನ ಅಹ್ಮದ್ ಎಲ್ ಸಯ್ಯದ್ ಎದುರು ಸೋತು ಮೊದಲ ಸುತ್ತಿನಲ್ಲೇ ಹೊರಬಿದ್ದರು. ಇನ್ನು ಇವರ ಎರಡನೇ ಒಲಿಂಪಿಕ್ ಕೂಟ ೧೯೯೬ರಲ್ಲಿ ಅಮೇರಿಕಾದ ಜಾರ್ಜಿಯಾ ರಾಜ್ಯದ ಅಟ್ಲಾಂಟ ನಗರದಲ್ಲಿ ನಡೆದಿತ್ತು. ಇಲ್ಲಿ ೩೨ ಜನರ ಅಂತಿಮ ಸುತ್ತಿಗೆ ಪ್ರವೇಶಿಸಲು ನಡೆದ ನಾಲ್ಕು ಜುಡೋಕುಗಳ ನಡುವಿನ ಪಂದ್ಯದಲ್ಲಿ ಸಿಂಗ್‍ರವರು ಐರ್ಲ್ಯಾಂಡ್‍ನ ಶಾನ್ ಸುಲ್ಲಿವನ್ ಎದುರು ಗೆದ್ದು, ನಂತರ ೩೨ರ ಸುತ್ತಿನಲ್ಲಿ ಅಟ್ಲಾಂಟದ ಜಾರ್ಜಿಯ ವಿಶ್ವ ಕಾಂಗ್ರೆಸ್ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಬೆಲಾರುಸ್‍ನ ನ್ಯಾಟಿಕ್ ಬಾಗಿರೋವ್ ಎದುರು ಸೋತು ಕೂಟದಿಂದ ಹೊರನಡೆಯಬೇಕಾಯಿತು. |ಅರ್ಜುನ ಪ್ರಶಸ್ತಿ === ಪ್ರಶಸ್ತಿಗಳು === ೧೯೯೯ ರಲ್ಲಿ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರದಲ್ಲಿ ಇವರ ಸಾಧನೆಗಳನ್ನು ಗಮನಿಸಿ ಇವರಿಗೆ ಭಾರತದ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಮೂಲಕ ಇವರು ೧೯೯೯ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ೨೩ ಕ್ರೀಡಾಪಟುಗಳಲ್ಲಿ ಏಕೈಕ ಜುಡೋಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. == ವಯಕ್ತಿಕ == ಇವರ ಪತ್ನಿ ಸುನೀತ್ ಠಾಕೂರ್ (೧೦ ಸೆಪ್ಟೆಂಬರ್ ೧೯೭೦ರಂದು ಜನನ) ಕೂಡ ೧೯೯೬ರಲ್ಲಿ ಅಟ್ಲಾಂಟದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಜೂಡೋ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮಹಿಳೆಯರ ಹಾಫ಼್ ಲೈಟ್ ವೇಟ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಇವರು ೧೯೯೫ರಲ್ಲಿ ದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಜೂಡೋ ಚಾಂಪಿಯನ್‍ಶಿಪ್‍ನಲ್ಲಿ ಮಹಿಳೆಯರ ೬೨ ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ತಮ್ಮ ಮುಡಿಗೇರಿಸಿಕೊಂಡರು. ಹೀಗೆ ೧೯೯೬ ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಜೂಡೋ ತಂಡದಲ್ಲಿ ಸಹ ಆಟಗಾರರಾಗಿ ಭಾಗವಹಿಸಿದ್ದ ಇವರಿಬ್ಬರು ದಂಪತಿಗಳಾಗಿದ್ದರು. ನರೀಂದರ್ ಸಿಂಗ್‍ರವರು ಪಂಜಾಬ್ ಆರ್ಮ್ಡ್ ಪೊಲೀಸ್(ಪಿ.ಎ.ಪಿ.) ವಿಭಾಗದಲ್ಲಿ ಓರ್ವ ಎಸ್.ಪಿ. ಆಗಿ ಕಾರ್ಯ ನಿರ್ವಹಿಸುತ್ತಿದ್ದರು. == ವಿವಾದ ಮತ್ತು ಮರಣ == ಸಿಂಗ್‍ರವರು ಎಸ್.ಪಿ. ಆಗಿದ್ದ ಸಂದರ್ಭದಲ್ಲಿ ಸಣ್ಣ ಸಮಸ್ಯೆಯೊಂದಾಗಿ ಅವರು ಓರ್ವ ಯುವಕನ ಮೇಲೆ ಗುಂಡು ಹಾರಿಸಿದ್ದಾರೆಂದು ಮತ್ತು ಆ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆಂದು ಎಸ್.ಪಿ. ನರೀಂದರ್‌ರವರ ಮೇಲೆ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಯಿತು. ೫ನೇ ಭಾರತದ ರಿಸರ್ವ್ ಬಟಾಲಿಯನ್ (ಐ.ಆರ್.ಬಿ.) ನ ಸಹಾಯಕ ಕಮಾಂಡೆಂಟ್ ನರೀಂದರ್ ಅವರನ್ನು ದೆಹಲಿಯ ಪಂಜಾಬ್ ಭವನದಲ್ಲಿ ಬುಕ್ ಮಾಡಲಾಗಿತ್ತು ಮತ್ತು ತರುವಾಯ ಅಮಾನತುಗೊಳಿಸಲಾಯಿತು. ಅವರು ತಮ್ಮ ಕೆಲಸದಲ್ಲಿ ತೊಡಗಿದ್ದಾಗ ಓರ್ವ ಯುವಕನ ಜೊತೆ ವಾಹನ ನಿಲುಗಡೆಯ ವಿಚಾರವಾಗಿ ಜಗಳವಾಡಿದ್ದರು, ಈ ಮಧ್ಯೆ ಅವರು ತಮ್ಮ ಬಂದೂಕನ್ನು ಹೊರತೆಗೆದು ಗುಂಡನ್ನು ಹಾರಿಸಿದ್ದರು. ಫ಼ೆಬ್ರುವರಿ ೫, ೨೦೧೬ರಂದು ಅವರು ತಮ್ಮ ಮನೆಯಲ್ಲೇ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದು ವಿಧಿವಶರಾದರು. ಅವರ ಧರ್ಮಪತ್ನಿಯಾದ ಮಾಜಿ ಭಾರತೀಯ ಜೂಡೋ ಪಟು ಸುನೀತ್ ಠಾಕೂರ್ ತಮ್ಮ ಪತಿ ಸೀಲಿಂಗ್ ಫ಼್ಯಾನ್‍ಗೆ ನೇಣು ಹಾಕಿಕೊಂಡಿರುವುದನ್ನು ನೋಡಿ ಖಚಿತಪಡಿಸಿದ್ದರು. ನರೀಂದರ್‌ರವರು ಪಂಜಾಬ್ ಪೊಲೀಸ್ ಇಲಾಖೆಯಿಂದ ಅಮಾನತಾದಾಗಿನಿಂದಲೂ ಖಿನ್ನತೆಗೆ ಒಳಗಾಗಿದ್ದರೆಂದು ವರದಿಯಾಗಿದೆ. ಸಿಂಗ್‍ರವರ ಸ್ನೇಹಿತರೇ ಆದ ಪಂಜಾಬ್‍ನ ಎಂ.ಎಲ್.ಎ ಪರ್ಗತ್ ಸಿಂಗ್, ನರೀಂದರ್‌ರವರ ಸಾವಿನ ಕುರಿತು ಈ ರೀತಿ ಹೇಳುತ್ತಾರೆ "ಪಂಜಾಬ್‍ನ ಪೊಲೀಸ್ ಇಲಾಖೆಯ ವೈಫ಼ಲ್ಯವು ಒಬ್ಬ ಪ್ರಶಂಸನೀಯ ಕ್ರೀಡಾಪಟುವಿನ ಮರಣಕ್ಕೆ ಕಾರಣವಾಗಿದೆ. ಎರಡು ವ‌ರ್ಷಗಳ ಕಾಲ ಅಮಾನತಿನಲ್ಲಿದ್ದರೂ ಸಹ, ಯಾವೊಬ್ಬ ಮೇಲಾಧಿಕಾರಿಯೂ ಸಹ ಸಿಂಗ್‍ರವರ ಮರುನೇಮಕಾತಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಿಲ್ಲ. ಇಂತಹ ಹಲವು ಅರ್ಜಿಗಳನ್ನು ಸಲ್ಲಿಸಿ ಮತ್ತೆ ಕೆಲಸಕ್ಕೆ ಮರಳುವ ಹಲವಾರು ಯತ್ನಗಳಲ್ಲಿ ವಿಫ಼ಲವಾದ ನರೀಂದರ್ ಕೊನೆಯಲ್ಲಿ ತಮ್ಮ ಪ್ರಾಣವನ್ನು ಬಿಡಲು ನಿರ್ಧರಿಸಿದರು". ೪೬ ವರ್ಷದ ಈ ಪ್ರತಿಭಾವಂತ ಜೂಡೋ ಪಟು ದುರಂತ ಅಂತ್ಯವನ್ನು ಕಾಣಬೇಕಾಯಿತು. == ಉಲ್ಲೇಖಗಳು ==